Thursday, September 21, 2017

ಆತ್ಮದ ಒಡೆಯನ ಜೊತೆಯಲ್ಲಿ ಒಂದು ಪ್ರವಾಸ!!!


ಪ್ರೀತಿಯ ಗುರುಪ್ರಸಾದ್ ಸರ್ 

ನಮಸ್ಕಾರ!!!

ನಿಮ್ಮ ಪರಿಶ್ರಮಕ್ಕೆ ನನ್ನ ಒಂದು ಅಭಿನಂದನೆಗಳು.. ಅಪ್ಪ ಎನ್ನುವ ಒಂದೇ ಮಾತು ಸಾಕು. ಚೈತನ್ಯಪೂರ್ಣ ಮನಸ್ಸನ್ನು ಸಜ್ಜುಗೊಳಿಸಿಕೊಳ್ಳಲಿಕ್ಕೆ.. ಅಂತಹ ಅಮೂಲ್ಯ ಆತ್ಮ ಬಂಧುವಿನ ಬಗ್ಗೆ ಒಂದೆರಡು ನನ್ನ ತೊದಲು ಮಾತುಗಳಿಂದ ಶುರು ಮಾಡಿ.. ಒಂದು ಪುಟ್ಟ ಲೇಖನ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ.. ಒಪ್ಪಿಸಿಕೊಳ್ಳಿ ಎಂದು ಹೇಳುತ್ತಾ ಅವರ ಮಡಿಲಿಗೆ ಹಾಕಿದ್ದೆ..

ನನ್ನ ಅಪ್ಪ ನನ್ನೊಳಗೆ ಕೂತು ಬರೆಸಿದ ಈ ಲೇಖನ ಅವರ ಆಶೀರ್ವಾದದ ಬಲದಿಂದ ಹಾಗೂ ಪುಸ್ತಕದ ಸಂಪಾದಕರಾದ ಶ್ರೀ ಗುರುಪ್ರಸಾದ್ ಕುರ್ತುಕೋಟಿ ಮತ್ತು ಪ್ರಕಾಶಕರಾದ ಶ್ರೀ ಉಮೇಶ್ ದೇಸಾಯಿ ಅವರ ಪರಿಶ್ರಮದಿಂದ ಈ ಲೇಖನ‌ ಪುಸ್ತಕದ‌ ಒಳಗೆ ಮೂಡಿಬಂದಿದೆ...ಅವರಿಗೆ ಅನಂತ ಧನ್ಯವಾದಗಳು.

ನಿಮ್ಮ ಶ್ರಮ, ಪರಿಶ್ರಮ, ಉತ್ಸಾಹಕ್ಕೆ ನೂರಾನೆ ಬಲ ಬರಲಿ ಎಂದು ಹಾರೈಸುತ್ತಾ... ಈ ಲೇಖನ ನಿಮ್ಮ ಓದುಗರ ಮಡಿಲಿಗೆ!




ಪುಸ್ತಕದ ಪ್ರತಿಗಳನ್ನು ಕೆಳಗಿನ ಲಿಂಕ್ ಗಳ ಮೂಲಕ ಕೊಂಡುಕೊಳ್ಳಬಹುದು...

http://navakarnatakaonline.com/ellaranthavanalla-nannappa

https://www.instamojo.com/appapustaka

°°°°°°°°°°°°

ಅಪ್ಪ ಎನ್ನುವ ಒಂದು ಶಕ್ತಿಯ ಬಗ್ಗೆ ಅಕ್ಷರಗಳನ್ನು ಮೂಡಿಸಲು ತಡಕಾಡಬೇಕಾದ ಪರಿಸ್ಥಿತಿಯೇ ಇಲ್ಲ.. ಕಣ ಕಣದಲ್ಲೂ ಬೆರೆತ ಆ ಶಕ್ತಿಯೇ ನನಗೆ ಬರೆಯಲು ಹಾದಿ ತೋರಿಸುತ್ತದೆ.. ನಾ ಇದುವರೆಗೆ ಬರೆದ ಯಾವುದೇ ಲೇಖನ ನಾ ಬರೆದಿಲ್ಲ.. ನನ್ನೊಳಗೆ ಕೂತಿರುವ ಅಪ್ಪ ಎನ್ನುವ ಶಕ್ತಿ ಹೇಳುತ್ತದೆ ನಾ ಬರೆಯುತ್ತೇನೆ.. ಲೇಖನಗಳಿಗೆ ಸಿಕ್ಕ ಮನ್ನಣೆ, ಗೌರವ ಏನಿದ್ದರೂ ಅದು ನನ್ನ ಅಪ್ಪನಿಗೆ ಸೇರಬೇಕು. ಅದರಲ್ಲಿ ತಪ್ಪಿದ್ದರೆ, ಸೂಕ್ಷಗಳು ಕಾಣೆಯಾಗಿತ್ತು ಕೊಂಚ ಗೊಂದಲ ಇತ್ತು / ಇದೆ ಎಂದರೆ, ಅದು ನಾ ನನ್ನೊಳಗಿನ ಅಪ್ಪನ ಧ್ವನಿಯನ್ನು ನಾ ಸರಿಯಾಗಿ ಕೇಳಿಸಿಕೊಳ್ಳದೆ ಬರೆದಿದ್ದೇನೆ.. ಹಾಗಾಗಿ ಆ ತಪ್ಪು ನನ್ನದೇ...
ಅಮ್ಮನ‌ ಛಲ ಅಪ್ಪನ ತಾಳ್ಮೆ

೧೯೮೧ರ ಸಮಯ.. ನಾವು ಬೆಂಗಳೂರಿಗೆ ಬಂದ ಹೊಸತು.. ಅಪ್ಪ ಜೆ. ಸಿ ರಸ್ತೆಯಲ್ಲಿ ಒಂದು ಆಫೀಸ್ ನಲ್ಲಿ ಕೆಲಸಕ್ಕೆ ಸೇರಿದ್ದರು. ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ತಮ್ಮ ಎರಡನೇ ತರಗತಿ.. ಒಂದು ಭಾನುವಾರ.. ಅಪ್ಪ ಯಥಾ ಪ್ರಕಾರ ಬೆಳಿಗ್ಗೆ ಐದಕ್ಕೆ ಎದ್ದು ಕೂತಿದ್ದರು. 

ನನ್ನ ಅಮ್ಮನಿಗೆ ಹೇಳಿದರು... ಇವರಿಬ್ಬರಿಗೂ ಬೇಗ ಸ್ನಾನ ಮಾಡೋಕೆ ಹೇಳು..ನನಗೆ ಮತ್ತು ನನ್ನ ತಮ್ಮನಿಗೆ ಅಪ್ಪ ಎಂದರೆ ಹೆದರಿಕೆ.. ಅಮ್ಮ ಎಂದರೆ ವಿಶ್ವಾಸ. ಅಪ್ಪ ಹೇಳಿದ್ದಕ್ಕೆ ಎರಡನೇ ಮಾತಿಲ್ಲ.. ಸರಿ ಸ್ನಾನ ಮಾಡಿ ಇದ್ದದ್ದರಲ್ಲಿ ತಕ್ಕ ಮಟ್ಟಿಗೆ ಚೆನ್ನಾಗಿದ್ದ ಬಟ್ಟೆಯನ್ನುಹಾಕಿಕೊಂಡಿದ್ದೆವು . 

ಸುಮಾರು ಬೆಳಿಗ್ಗೆ ಎಂಟು ಘಂಟೆಗೆ ಮನೆಯ ಮುಂದೆ ಕಾರು ನಿಂತಿತು.

"ಕೆ ಆರ್.. ರೆಡಿ ನಾ ಹೋಗೋಣವೆ" (ಕೆ ಆರ್ ಇದು ನನ್ನ ಅಪ್ಪನನ್ನ ಆಫೀಸ್ ನಲ್ಲಿ ಕರೆಯುತಿದ್ದ ಹೆಸರು) ನನ್ನ ಅಪ್ಪನ ಬಾಸ್ ಹೇಳಿದಾಗ, ಮರು ಮಾತಿಲ್ಲದೆ ಕಾರಿನಲ್ಲಿ ಕೂತೆವು. 

ನನ್ನ ಅಪ್ಪನ ಬಾಸ್, ನನ್ನ ಅಪ್ಪನ ಗೆಳೆಯ ಅಂದರೆ ಸಹಪಾಠಿ, ಜೊತೆಯಲ್ಲಿ ನನ್ನ ಮತ್ತು ನನ್ನ ತಮ್ಮನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಮಹಾನ್ ಚೇತನ.. ಅವರ ಹೆಸರು ಶ್ರೀ ಸೀತಾರಾಮು. ತಂಪು ಹೊತ್ತಿನಲ್ಲಿ ನೆನಯಬೇಕಾದ ಮಹನೀಯರು. 

ಕಾರನ್ನು ನನ್ನ ಅಪ್ಪನ ಬಾಸ್ ಚಲಾಯಿಸುತ್ತಿದ್ದರು. ಆಗಿನ ಕಾಲದ ಅಂಬಾಸೆಡರ್.. ಹ್ಯಾಂಡ್ ಗೇರ್. ನಾನು ಹಿಂದಿನ ಸೀಟ್ ನಲ್ಲಿ ಕೂತು ಅವರು ಗೇರನ್ನು ಬದಲಿಸುತ್ತಿದ್ದನ್ನು ನೋಡುತ್ತಿದ್ದೆ, ನನ್ನ ತಮ್ಮ ಕಿಟಕಿಯಲ್ಲಿ ಸುತ್ತ ಮುತ್ತಲ ಜಾಗಗಳನ್ನು ನೋಡುತಿದ್ದ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಕಾರಿನಲ್ಲಿ ಪಯಣ. 

ನನ್ನ ಅಪ್ಪ ಸ್ಥಿತ ಪ್ರಜ್ಞಸ್ಯ ಲಕ್ಷಣಾನಿ ಎನ್ನುವಂತೆ ಸಮಚಿತ್ತದಿಂದ ಕೂತಿದ್ದರು ಮುಂದಿನ ಸೀಟಿನಲ್ಲಿ.  ಕಾರು ಜೆಸಿ ರಸ್ತೆಯ ಕಾಮತ್ ಹೋಟೆಲಿನ ಹತ್ತಿರ ನಿಂತಿತು (ಭಾರತ್ ಥೀಯೇಟರ್ ಒಡೆದು ಅಲ್ಲಿ ಹೋಟೆಲ್ ಕಟ್ಟಿದ್ದರು ಈಗ ಆ ಹೋಟೆಲ್ ಇಲ್ಲಾ). 

ಹೋಟೆಲಿನಲ್ಲಿ ತಿಂದದ್ದೇ ಗೊತ್ತಿರದ ನಮಗೆ.. ಅಂದು ಭರ್ಜರಿ ಖುಷಿ.. ಮೊದಲು ಮಸಾಲೆ ದೋಸೆ (ನನ್ನ ಜೀವನದ ಮೊದಲನೇ ಮಸಾಲೆ ದೋಸೆ).. ನಂತರ.. 

"ಕೆ ಆರ್ ಮಕ್ಕಳು ಕಾಫಿ ಕುಡಿತಾರೆನೋ" 

"ಬೇಡ ಹಾಲು ಕೊಡಿಸು"

ಬಾದಾಮಿ ಹಾಲು ಬಂತು.. ಬಾಯಲ್ಲಿ ಇನ್ನೂ ಮಸಾಲೆ ದೋಸೆಯ ಆಲೂಗಡ್ಡೆ ಪಲ್ಯ, ಚಟ್ನಿ, ಮತ್ತು ದೋಸೆ ತುಂಡು ಹಾಗೆ ಇತ್ತು.. ಬಾದಾಮಿ ಹಾಲಿನ ವಾಸನೆಗೆ ಮನಸೋತಿತ್ತು.. ಬಿಸಿ ಇದ್ದರೂ... ಘಮ ಘಮಗುಟ್ಟುತ್ತಿದ್ದ ಹಾಲನ್ನು ನಿಧಾನಕ್ಕೆ ಹಾಗೆ ಹೊಟ್ಟೆಯೊಳಗೆ ಇಳಿಸಿದೆವು. 

ಅಪ್ಪ ಸಮಾಧಾನ ಚಿತ್ತದಿಂದ ಕೂತಿದ್ದರು, ನಾವು ಕೂಡ ಅಪ್ಪನ ಮರ್ಯಾದೆ ಹಾಳು  ಮಾಡಬಾರದು, ಪೆದ್ದು ಪೆದ್ದಾಗಿ ಆಡಬಾರದು, ಜೊತೆಯಲ್ಲಿ ನಮಗೆ ಸಿಕ್ಕ ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಕೊಳ್ಳಬೇಕು ಎಂದು ಬಹಳ ನಾಜೂಕಾಗಿ ತಿನ್ನುತ್ತಿದ್ದೆವು. 

ಇನ್ನೇನೂ, ತಿಂದಿದ್ದು, ಕುಡಿದಿದ್ದು ಮುಗೀತು.. ಬಿಲ್ ಬಂತು.. ಅಪ್ಪನ ಬಾಸ್ ಕೊಟ್ಟರು.. ತಟ್ಟೆಯಲ್ಲಿ ಬಿಲ್ಲಿನ ಜೊತೆ ಕೊಂಚ ಚಿಲ್ಲರೆ (೫೦ ಪೈಸೆ, ೨೫ ಪೈಸೆ ಮತ್ತು ೧೦ ಪೈಸೆಯನ್ನು ಬಿಟ್ಟಿದ್ದರು.. ಇನ್ನೂ ಚೆನ್ನಾಗಿ ನೆನಪಿದೆ).. ನನಗೆ ಮನದಲ್ಲಿಯೇ ಅಯ್ಯೋ ೮೫ ಪೈಸೆ ಬಿಟ್ಟಿದ್ದಾರಲ್ಲಪ್ಪ.. ಒಂದು ಅರ್ಧ ಕೆಜಿ ಅಕ್ಕಿ ಬರುತ್ತೆ.. 
ಆದರೆ ಅಪ್ಪನ ಭಯ.. ಆ ದುಡ್ಡನ್ನು ತೆಗೆದುಕೊಳ್ಳಲಾರದೆ ಒದ್ದಾಡುತ್ತಿತ್ತು ಮನಸ್ಸು!

ಜೆಸಿ ರಸ್ತೆಯಿಂದ ಕಾರು ಸೀದಾ.. ಮೈಸೂರು ರಸ್ತೆಯ ಕಡೆಗೆ ತಿರುಗಿತು.. ನನಗೆ ಮತ್ತು ನನ್ನ ತಮ್ಮನಿಗೆ ಬೆಳಿಗ್ಗೆ ತಲೆ ಸ್ನಾನ ಮಾಡಿದ್ದು, ಜೊತೆಯಲ್ಲಿ ಮಸಾಲೆ ದೋಸೆ.. ಒಳ್ಳೆ ನಿದ್ದೆ ಹತ್ತಿತ್ತು.. ಅಪ್ಪ ಹಿಂದೆ ತಿರುಗಿ ಒಮ್ಮೆ ನೋಡಿದರು.. ನಾವಿಬ್ಬರು ತೂಕಡಿಸುತ್ತಿದ್ದೆವು.. ಅರೆಬರೆ ನಿದ್ದೆ.. 

"ಕೆ ಆರ್ ಮಕ್ಕಳು ಮಲಗಲಿ ಬಿಡು" 

ಅಪ್ಪ ಸುಮ್ಮನೆ ತಲೆ ಅಲ್ಲಾಡಿಸಿದರು. 

ಸಹಪಾಠಿಯಾಗಿದ್ದರೂ, ಅಪ್ಪ ಮತ್ತು ಬಾಸ್ ಒಬ್ಬರಿಗೊಬ್ಬರು ಮಾತಾಡಿದ್ದು ಬಹಳ ಕಡಿಮೆ.. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಒಂದು ಬಗೆ ವಿಶಿಷ್ಟ ಗೌರವ.. ಬರಿ ಕಣ್ಣಲ್ಲಿಯೇ ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ನಾವು ಪೂರ್ಣ ನಿದ್ದೆಗೆ ಜಾರಿದ್ದೆವು.. 

ಕಚಕ್ ಕಾರು ನಿಂತ ಅನುಭವ.. ಸುತ್ತ ಮುತ್ತಲೂ ನೋಡಿದೆವು.. ಬೃಹದಾಕಾರವಾಗಿ ನಿಂತಿದ್ದ ಆಲದ ಮರ.. 

ಅಪ್ಪ ನಮ್ಮಿಬ್ಬರನ್ನು ಉದ್ದೇಶಿಸಿ "ನೋಡು ಇದೆ ದೊಡ್ಡ ಆಲದ ಮರ.. ಇದು ಎಲ್ಲಿ ಶುರುವಾಗಿದೆ ಅಂತ ಗೊತ್ತಾಗೊಲ್ಲ.. " ಅಷ್ಟೇ ಹೇಳಿದ್ದು.. ನಾವಿಬ್ಬರು ಮರದ ಕೊಂಬೆಗಳನ್ನು ನೋಡುತ್ತಲೇ ಒಳಗಡೆ ಓಡಾಡಿದೆವು.. ನಿಜಕ್ಕೂ ಅದು ದೊಡ್ಡಾಲದ ಮರವೇ.. 

ನನ್ನ ಮೊದಲನೇ ಪ್ರವಾಸ ಇದು.. ಒಂದು ಅರ್ಧ ಘಂಟೆ ಅಲ್ಲಿದ್ದು.. ಮತ್ತೆ ಕಾರು ಹೊರಟಿತು.. ನಾವಿಬ್ಬರೂ ಕಿಟಕಿ ಹತ್ತಿರ ಕೂತು ಮಂಗಗಳ ತರಹ ಆಕಡೆ ಈ ಕಡೆ ನೋಡುತ್ತಾ ಕೂತಿದ್ದೆವು. 

ಮತ್ತೆ ಕಾರು ನಿಂತಿತು.. 

"ಕೆ ಆರ್ ಇದೆ ಕಣೋ ಮಂಚನ ಬೆಲೆ ಡ್ಯಾಮ್.. ಬೆಂಗಳೂರಿಗೆ ನೀರು ಬರೋದು ಇಲ್ಲಿಂದಲೇ.. " 
ಅಪ್ಪ ಸದ್ದಿಲ್ಲದೇ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರು.. ನಾವು ಅವರ ಜೊತೆ :-)

ಸ್ವಲ್ಪ ಹೊತ್ತು ಅಲ್ಲಿಯೇ ಕೂತಿದ್ದೆವು.. ಅಪ್ಪನ ಬಾಸ್ ನಮಗೋಸ್ಕರ ಬಿಸ್ಕತ್,  ಬ್ರೆಡ್ , ರಸ್ಕ್, ತಂದಿದ್ದರು, ಅಪ್ಪ ನಮಗೆ ತಿನ್ನಲು ಕೊಟ್ಟರು .. ನಮಗೆ ಈ ಪದಾರ್ಥವೆಲ್ಲಾ ಸಿರಿವಂತರ ತಿನಿಸು ಎಂದು ನಂಬಿದ್ದ ಕಾಲ.. 

ಆ ರುಚಿಯನ್ನು ಚೆನ್ನಾಗಿ ಸವಿದು ತಿಂದೆವು .. ಅಲ್ಲಿ ಸ್ವಲ್ಪ ಹೊತ್ತು ಕೂತಿದ್ದೆವು.. ಖುಷಿಯಾಗಿತ್ತು ಬೆಳಿಗ್ಗೆಯಿಂದ ಎಲ್ಲಾ ಮೊದಲೇ.. 

ಕಾರಿನಲ್ಲಿ ಪಯಣ 
ಹೋಟೆಲಿನಲ್ಲಿ ತಿಂಡಿ 
ಮೊದಲನೇ ಬಾರಿ ಮಸಾಲೆ ದೋಸೆ 
ಘಮ ಘಮಗುಟ್ಟುವ ಬಾದಾಮಿ ಹಾಲು 
ದೊಡ್ಡ ಆಲದ ಮರದ ಪ್ರವಾಸ 
ಮಂಚನ ಬೆಲೆ ಅಣೆಕಟ್ಟು ವೀಕ್ಷಣೆ..
ಇದಕ್ಕೆಲ್ಲ ಕಳಶಪ್ರಾಯವಾಗಿದ್ದು ಅಪ್ಪನ ಜೊತೆಯಲ್ಲಿ ಮೊದಲ ಪ್ರವಾಸ. 

ನಮ್ಮ ಕಾಲ ಮೇಲೆ ನಾವು ನಿಂತಾದ ಮೇಲೆ, ಮಂಚನಬೆಲೆ, ದೊಡ್ಡ ಆಲದ ಮರ, ಹೋಟೆಲ್ ಊಟ ತಿಂಡಿ ಬೇಕಾದಷ್ಟು ಆಗಿದೆ, ಆದರೆ ಮೊದಲ ಪ್ರವಾಸ ಕಣ್ಣಿಗೆ ಕಟ್ಟಿದಂತಿದೆ ಇಂದಿಗೂ.. ಕಾರಣ ಏನು ಗೊತ್ತೇ" 

ಅಪ್ಪ ಎನ್ನುವ ಆತ್ಮ ವಿಶ್ವಾಸ ನಮ್ಮ ಜೊತೆಯಲ್ಲಿದ್ದದ್ದು.. ಅದು ಮಾಡಬೇಡಿ, ಇದು ಮಾಡಬೇಡಿ,ಹಾಗಿರಿ , ಹೀಗಿರಿ.. ಊಹೂಂ ಒಂದು ಕಟ್ಟು ನಿಟ್ಟಿನ ಮಾತುಗಳಿಲ್ಲ.. ನಮ್ಮನ್ನು ನಮ್ಮಷ್ಟಕ್ಕೆ ಇರಲು ಬಿಟ್ಟಿದ್ದರು.. ಜೊತೆಯಲ್ಲಿ ಪುಷ್ಕಳ ಊಟ ತಿಂಡಿ, ಲಗ್ಸುರಿ ಎನ್ನುವಂತಹ ಬ್ರೆಡ್ ಬಿಸ್ಕತ್ ರಸ್ಕ್ ಸೇವನೆ.. ಇದು ಇದ್ದರೂ, ಅಪ್ಪ ಮಂಚನ ಬೆಲೆ ಅಣೆಕಟ್ಟಿನ ಬಗ್ಗೆ ಹೇಳಿದ ಮಾತು, ದೊಡ್ಡ ಆಲದ ಮರದ ಬಗ್ಗೆ ಹೇಳಿದ ಮಾತು.. ಇನ್ನೂ ನನ್ನ ಕಿವಿಯಲ್ಲಿ ಹಾಗೆ ಇದೆ.. 

ಇದಾದ ಮೇಲೆ ಅನೇಕ ಬಾರಿ ನಾ ಪ್ರವಾಸ, ಚಾರಣ, ಯಾತ್ರೆಗಳನ್ನು ಮಾಡಿದ್ದೇನೆ. ಆದರೆ ಮೊದಲ ಪ್ರವಾಸದಲ್ಲಿ ಅಪ್ಪ ಹಾಕಿದ್ದ ಹಾದಿಯನ್ನೇ ನಾ ಅನುಸರಿಸುತ್ತಾ ಇರೋದು. ನಾವು ಹೋಗಬೇಕಾದ ಜಾಗದ ಬಗ್ಗೆ ಮೊದಲೇ ತಿಳಿದುಕೊಂಡು, ಅಲ್ಲಿಗೆ ಹೋದಾಗ ತಿಳಿದುಕೊಂಡಿದ್ದ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸುಂದರ ಪ್ರಕೃತಿಯನ್ನು ಕಣ್ಣಿನಲ್ಲಿ ಸೆರೆಹಿಡಿದುಕೊಂಡು, ಸುತ್ತಾ ಮುತ್ತಲ ಪ್ರದೇಶವನ್ನು ಹಾಳು ಮಾಡದೆ ಬರುವುದನ್ನು ಅಪ್ಪನಿಂದ ಕಲಿತೆ. ಪ್ರವಾಸಕ್ಕೆ ಹೋದಾಗ ಆಊಒ ಅಂತ ಕಿರುಚಾಡದೆ, ತಣ್ಣಗೆ ತಾಳ್ಮೆಯಿಂದ ನೋಡುವುದನ್ನು ಕಲಿತದ್ದು ಅಪ್ಪನಿಂದ.. 

ಅಪ್ಪ ಒಂದು ಶಕ್ತಿ.. ಅಪ್ಪ ಒಂದು ಮಾರ್ಗ...  ಅಪ್ಪ ಒಂದು ವಿಶ್ವ ವಿದ್ಯಾಲಯ.. 
ಇಂದು ನಾ ಏನೇ ಆಗಿದ್ದರೂ ಅದಕ್ಕೆ ಅಪ್ಪನ ತಾಳ್ಮೆಯ ನಡೆ ನುಡಿ ನನಗೆ ದಾರಿ ದೀಪವಾಗಿದೆ.. 
ನನ್ನ ಆತ್ಮದ ಒಡೆಯನ ಜೊತೆ


ಅಪ್ಪ.. ನೀವೇ ನನ್ನ ನಾಯಕ!!!

ಆ ಸುಂದರ ಭಾನುವಾರ.. ಅವತ್ತು ಕಾಮತ್ ಹೋಟೆಲ್, ದೊಡ್ಡ ಆಲದ ಮರ, ಮಂಚನ ಬೆಲೆ, ಕಾರು ಪಯಣ, ಮಸಾಲೆ ದೋಸೆ, ಬಾದಾಮಿ ಹಾಲು ಇವೆಲ್ಲಾ ಸವಿದ್ದಿದ್ದರೂ.. ಮನದಲ್ಲಿ ಸಂತಸದ ಕಡಲು ಎದ್ದಿದ್ದರೂ, ಮನೆಗೆ ಬಂದ ಮೇಲೂ ಒಂದು ಪ್ರಶ್ನೆ ಕಾಡುತ್ತಲೇ ಇತ್ತು.. ಹೋಟೆಲಿನಲ್ಲಿ ೮೫ ಪೈಸೆಯನ್ನು ಯಾಕೆ ಅಲ್ಲಿಯೇ ಬಿಟ್ಟರು!

2 comments:

  1. ಸುಂದರ ಲೇಖನ ಶ್ರೀ... ನಿಜಕ್ಕೂ ಅಷ್ಟು ಹಿಂದೆ ನಡೆದ ಘಟನೆಗಳು ಸ್ವಲ್ಪವೂ ಮರೆಯದೆ ಹಾಗೆ ಬರೆದಿದ್ದಿಯಾ really speechless hats off for your article Sri nenage nenna ತಂದೆಯ ಮೇಲಿನ ಪ್ರೀತಿ ವಿಶ್ವಾಸ ಪೂಜನೀಯ ಭಾವವನ್ನು ತುಂಬು ಹೃದಯದಿಂದ ವ್ಯಕ್ತ ಪಡಿಸಿದ್ದಿಯಾ ತುಂಬಾ ಸೊಗಸಾಗಿದೆ ಶ್ರೀ ��������


    ಅಪ್ಪನ ಜನ್ಮದಿನಕ್ಕೆ ಸುಂದರವಾದ ಲೇಖನ ಅರ್ಪಣೆ ����

    ReplyDelete
  2. ಅಪ್ಪ ನಿಮ್ಮ ಅಕ್ಷರಗಳ ಮೂಲ ಶಕ್ತಿ. ನಿಮ್ಮೋಳಗೆ ಬೆರೆತು ಬರಹಗಳ ಪ್ರೇರಣೆಯಾಗಿ ಲೇಖನವಾಗಿ ನಿತ್ಯವೂ ಜನ್ಮತಾಳುತ್ತಿದ್ದರೆ ಚಿರಂಜೀವಿಯಾಗಿಸಿರುವ ಹಿರಿಮೆ ನಿಮಗೆ ಸೇರಬೇಕು..
    ವಿದ್ಯಾಭ್ಯಾಸದ ಜೊತೆಗೆ ಜೀವನ ಪಾಠವನ್ನು ಬಲವಂತವಾಗಿಸದೇ ಹೊರೆಯಾಗಿಸದೆ ಕಲಿಸಿದ್ದು ಮಾದರಿ..
    ಅವೆಲ್ಲವೂ ನಿಮ್ಮಲ್ಲಿ ಬೆರೆತು ಶಕ್ತಿಯಾಗಿ ನಿಮ್ಮಲ್ಲೇ ಪ್ರತಿಫಲಿಸುತ್ತಿರುವಾಗ ಅಪ್ಪನನ್ನು ನಾನು ನೋಡಿಲ್ಲ ಅಂದರೆ ಸುಳ್ಳಾಗುತ್ತದೆ..
    ನಿಮ್ಮನ್ನು ಮಗನಾಗಿ ಪಡೆದ ಆ ಹಿರಿಯ ಚೇತನಕ್ಕೆ ನನ್ನ ಪ್ರೀತಿಯ ನಮನ..

    ReplyDelete